ಷೋಡಷಾವಧಾನದಲ್ಲಿ ಅನ್ವೇಶ್ ಅಂಬೆಕಲ್ಲು ಗೆ ವಿಶ್ವದಾಖಲೆ ಕಿರೀಟ....
Saturday, June 29, 2024
Edit
ವಿಶ್ವದಾಖಲೆ ಬರೆದ ಅನ್ವೇಶ್ ಅಂಬೆಕಲ್ಲು
ಷೋಡಷಾವಧಾನದಲ್ಲಿ ಅನ್ವೇಶ್ ಅಂಬೆಕಲ್ಲು ಗೆ ವಿಶ್ವದಾಖಲೆ ಕಿರೀಟ.... ಹದಿನಾರು ಮಂದಿ ಕೊಟ್ಟ 16 ವಿಷಯಗಳನ್ನು ಏಕಕಾಲಕ್ಕೆ ನೋಡಿ, ಕೇಳಿ, ಗಮನಿಸಿ, ಸ್ಮರಣಶಕ್ತಿಯೊಳಗೆ ದಾಖಲಿಸಿಕೊಂಡು, ಪ್ರದರ್ಶನ ನೀಡುವ “ಷೋಡಷಾವಧಾನ" ದ ಮೂಲಕ ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಅನ್ವೇಶ್ ಅಂಬೆಕಲ್ಲು ಹರಿಯಾಣದ 'ಇಂಡಿಯಾ ಬುಕ್ ಆಫ್ ರೆಕಾರ್ಡ್' ಸಂಸ್ಥೆಯ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ನೆನಪಿನ ಹತ್ತು ತಂತ್ರಗಳ ಮೂಲಕ ಮಕ್ಕಳಲ್ಲಿರುವ ಅಗಾಧ ಸಾಮರ್ಥ್ಯವನ್ನು ಸ್ವರೂಪ ಶಿಕ್ಷಣದ ಮೂಲಕ ಪರಿಚಯಿಸುವ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಅವರ ಮಾರ್ಗದರ್ಶನದಲ್ಲಿ ಈ ದಾಖಲೆಯು ಬರೆಯಲ್ಪಟ್ಟಿತು. ಪುಸ್ತಕಗಳ ಹೆಸರುಗಳು, ಪ್ರಶ್ನೆಗಳು, ಸಂಖ್ಯೆಗಳು, ವಸ್ತುಗಳ ಹೆಸರು, ಚಿತ್ರಗಳ ಹೆಸರುಗಳು, ಹಾಡುಗಳ ಹೆಸರುಗಳು, ಘಂಟೆ ಶಬ್ದಗಳು, ಕ್ರಿಯೇಟಿವ್ ಆರ್ಟ್... ಜೊತೆಗೆ ಎರಡು ಕೈಗಳಿಗೂ, ಯೋಚನೆಗಳಗೂ ನಿರಂತರ ಕೆಲಸದೊಂದಿಗೆ ಹೀಗೆ ಇನ್ನೂ ಹಲವು ವಿಚಾರಗಳ ಜೊತೆಗೆ ರೂಬಿಕ್ಸ್ ಕ್ಯೂಬ್ ಪರಿಹರಿಸಿಕೊಂಡು ಕಾಳುಗಳನ್ನು ಎಣಿಸುತ್ತಾ. ಮಧ್ಯೆ ಮಧ್ಯೆ ಪ್ರವೇಶ ಮಾಡಿ ಕಿರಿ ಕಿರಿ ಮಾಡುವ ಅಧಿಕ ಪ್ರಸಂಗಿಯನ್ನು ಸಹಿಸಿಕೊಂಡು 16 ವಿಷಯಗಳ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ದಾಖಲಿಸುವ ಮೂಲಕ ಈ ಅದ್ಭುತ ಸಾಧನೆಯನ್ನು ಸಾರ್ವಜನಿಕವಾಗಿ ಗಣ್ಯರ ಸಾಕ್ಷಿಗಳ ಮುಂದೆಯೇ ಪ್ರದರ್ಶನ ಮಾಡಿ ದಾಖಲೆ ಮಾಡಿದ್ದಾರೆ.
ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ 1ರಿಂದ 7 ನೆಯ ತರಗತಿ ಅಭ್ಯಾಸವನ್ನು ಪೂರ್ಣಗೊಳಿಸಿ ಪ್ರಸ್ತುತ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ 9ನೆಯ ತರಗತಿ ವ್ಯಾಸಂಗ ಮಾಡುತ್ತಿದ್ದು ಪಠ್ಯಪುಸ್ತಕಗಳ ಕಲಿಕೆಯೊಂದಿಗೆ ವಿಶೇಷ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುವ ಅನ್ವೇಶ್,
ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಮಿಮಿಕ್ರಿ ಬೀಟ್ಬಾಕ್ಸ್, ನೆನಪು ಶಕ್ತಿಯ ಪ್ರತಿಭಾ ಪ್ರದರ್ಶನ ಹಾಗೂ ವಯೋಲಿನ್ ಅಭ್ಯಾಸ ನಡೆಸುತ್ತಿರುವ ಜೊತೆಗೆ ಚಿತ್ರಕಲೆಯಲ್ಲಿಯೂ ಗುರುತಿಸಿಕೊಂಡಿದ್ದು ಉದಯೋನ್ಮುಖ ಪ್ರತಿಭೆಯಾಗಿ ತೆರೆದುಕೊಳ್ಳುತ್ತಿದ್ದಾರೆ.
ಮೂಲತಃ ಸುಳ್ಯದವರಾಗಿದ್ದು ಪ್ರಸ್ತುತ ಮಂಗಳೂರಿನ ಬಂಟ್ವಾಳದ ಮೆಲ್ಕಾರ್ನಲ್ಲಿ ವಾಸವಿರುವ ಇಂಜಿನಿಯರ್ ಮಧುಸೂದನ್ ಅಂಬೆಕಲ್ಲು ಹಾಗೂ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಅವರ ಪುತ್ರನಾಗಿರುವ ಅನ್ವೇಶ್ ಅಂಬೆಕಲ್ಲು ಇದೀಗ ಸ್ವರೂಪದಲ್ಲಿ 9ನೇ ತರಗತಿಯ ಪಠ್ಯದ ಜೊತೆ ಜೊತೆಗೆ 10ನೇ ತರಗತಿಯ ಪಠ್ಯಗಳನ್ನು ಒಂದೇ ತಿಂಗಳಲ್ಲಿ ಮುಗಿಸಿಕೊಂಡು ಇನ್ನೂ ಇತರ ಹಲವು ವಿಷಯಗಳಲ್ಲಿ 10 ವಿಶ್ವದಾಖಲೆಯ ಸಾಧನೆಗಳನ್ನು ಮಾಡುವ ಸಿದ್ಧತೆಯಲ್ಲಿದ್ದಾನೆ.
ಮಕ್ಕಳಿಗೆ ಕಲಿಕೆ, ಸಾಧನೆ ಶೋಧನೆ ಮೂಲಕ ಬೆಳೆಯುವ ಹಾದಿಯನ್ನು ತೋರಿಸಿಕೊಡುತ್ತಿರುವ
ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್, ಸುಮಾಡ್ಕರ್ ಹಾಗೂ ಆದಿ ಸ್ವರೂಪ ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.