-->
ಜಗಲಿಯ ಸಾಧಕರ ಪರಿಚಯ :  ಸಂಚಿಕೆ - 1

ಜಗಲಿಯ ಸಾಧಕರ ಪರಿಚಯ : ಸಂಚಿಕೆ - 1

ಜಗಲಿಯ ಸಾಧಕರ ಪರಿಚಯ :  ಸಂಚಿಕೆ - 1

        ಮಕ್ಕಳ ಜಗಲಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಮೊನ್ನೆ ನಡೆದ SSLC ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಪರಿಚಯ



      ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಧೃತಿ. ನಾನು ಸರ್ಕಾರಿ ಪ್ರೌಢಶಾಲೆ, ಮಂಚಿ ಕೊಳ್ನಾಡು ಇಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ನನಗೆ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 575 ಅಂಕವನ್ನು ಗಳಿಸಿದ್ದೇನೆ. ತುಂಬಾ ಖುಷಿಯಾಯಿತು. ನಾನಂದುಕೊಂಡ ಹಾಗೆ ಬಂದಿದೆ.ಇದರಿಂದ ಮನೆಯಲ್ಲಿ ಖುಷಿಯಾಗಿದ್ದಾರೆ. ನನಗೆ ನನ್ನ ಸಂಬಂಧಿಕರು, ಗೆಳೆಯ, ಗೆಳತಿಯರೆಲ್ಲರೂ ನನಗೆ ವಿಶ್ ಮಾಡಿದ್ದಾರೆ ತುಂಬಾ ಸಂತೋಷಪಟ್ಟಿದ್ದಾರೆ.
      ಮಕ್ಕಳ ಜಗಲಿ ಇದೊಂದು ಉತ್ತಮವಾದ ಅವಕಾಶವಾಗಿದೆ. ಮಕ್ಕಳ ಅಚ್ಚುಮೆಚ್ಚಿನ ವೇದಿಕೆಯಾಗಿದೆ. ನನಗೆ ಈ ಮಕ್ಕಳ ಜಗಲಿಯಿಂದ ತುಂಬಾ ಉಪಯೋಗವಾಗಿದೆ. ಕೊರೊನಾ ಕಾಲದಲ್ಲಿ ನಾನು ಸಣ್ಣಪುಟ್ಟ ಚುಟುಕುಗಳನ್ನು ಬರೆಯುತ್ತಿದ್ದೆ. ನಂತರ ಪೋಷಕರ ಹಾಗೂ ಶಾಲಾ ಶಿಕ್ಷಕರ ಸಹಾಯದಿಂದ ಹಾಗೂ ಪ್ರೋತ್ಸಾಹದಿಂದ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ಮಕ್ಕಳ ಜಗಲಿಯಲ್ಲಿ ನಿರಂತರ ಸುಮಾರು 30- 40 ಕವನ ಬರೆದಿದ್ದೆ. ಅದರಲ್ಲೂ ನಮ್ಮ ಶಾಲಾ ಚಿತ್ರಕಲಾ ಶಿಕ್ಷಕರಾದ ತಾರಾನಾಥ್ ಸರ್ ಇವರು ಬಹಳ ಸಹಾಯ ಹಾಗೂ ಪ್ರೋತ್ಸಾಹವನ್ನು ನೀಡಿದ್ದಾರೆ. ಇದರ ಫಲವಾಗಿ ನಾನು ಬರೆದಿರುವ ಕವನಗಳ "ಮರವಾಗು" ಸಂಕಲನ ಪುಸ್ತಕವನ್ನು ಬಿಡುಗಡೆ ಮಾಡುವ ಭಾಗ್ಯ ದೊರಕಿತು. ಇದೊಂದು ನನ್ನ ಜೀವನದ ಒಂದು ಹೆಮ್ಮೆ ಪಡುವಂತಹ ಸಾಧನೆಯಾಗಿದೆ. ಈ ಪುಸ್ತಕವನ್ನು ತೆಗೆದು ಓದಿ ಬಹಳ ಖುಷಿಪಟ್ಟಿದ್ದಾರೆ. ಬಹಳ ಉತ್ತಮವಾಗಿ ಕವನಗಳು ಮೂಡಿಬಂದಿದೆ ಎಂದಿದ್ದಾರೆ. ಇನ್ನಷ್ಟು ಕವನಗಳು ಬಿಡುಗಡೆಯಾಗಲಿ ಎಂದು ಹಾರೈಸಿದ್ದಾರೆ. 
     ಎಲ್ಲರ ಜೀವನದಲ್ಲೂ ಹತ್ತನೇ ತರಗತಿಯ ಅಂಕ ಇದೊಂದು ಅತ್ಯುತ್ತಮವಾದ ಘಟ್ಟವಾಗಿದೆ. ನನಗೂ ಸಹ ಇದು ನನ್ನ ಜೀವನದ ಸಾಧನೆಯಾಗಿದೆ. ನನ್ನನ್ನು ಇಷ್ಟು ವರ್ಷ ತಿದ್ದಿ- ತೀಡಿ, ಬುದ್ದಿ ಹೇಳಿ ತಪ್ಪನ್ನು ಸರಿಪಡಿಸಿ ಕೆಲವೊಂದು ತಪ್ಪುಗಳನ್ನು ಕ್ಷಮಿಸಿದ ನನ್ನ ತಂದೆ ತಾಯಿಯವರೆಗೂ ಹಾಗೂ ನನ್ನೆಲ್ಲ ಗುರುಗಳಿಗೂ ಮತ್ತು ನನಗೆ ನಿರಂತರವಾಗಿ ಸಹಕರಿಸಿದ ಮಕ್ಕಳ ಜಗಲಿಯ ನಿಮಗೆಲ್ಲರಿಗೂ ನಾನು ಸದಾ ಚಿರಋಣಿಯಾಗಿರುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಆಶಿಸುತ್ತಾ... ಧನ್ಯವಾದಗಳೊಂದಿಗೆ...
..................................................... ಧೃತಿ 
10ನೇ ತರಗತಿ 
ಸರಕಾರಿ ಫ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
******************************************




       ನಾನು ನಂದಿತಾ ಯು ತೋರಣಗಲ್. ಮಕ್ಕಳ ಜಗಲಿ ನಮ್ಮ ಉತ್ಸಾಹ ಹೆಚ್ಚಿಸುವ ವೇದಿಕೆ.. ನಾನು ಮಕ್ಕಳ ಜಗಲಿ ವೇದಿಕೆಯಲ್ಲಿ ಕವನಗಳನ್ನು ಬರೆದು ಪ್ರಕಟಿಸುವುದಕ್ಕಾಗಿ ಹಾಕಿದ್ದೆ. ನನ್ನ ಕವನಗಳು ದಿನಾಂಕ 25 ಏಪ್ರಿಲ್ 2023 ರಂದು ಪ್ರಕಟವಾಗಿದ್ದವು. ನನಗೆ ಅಂದು ಬಹಳ ಸಂತೋಷವಾಗಿತ್ತು. ಹೀಗೆ ನಮ್ಮ ಶಾಲೆಯಲ್ಲಿನ ಯುವ ಕವಿಯತ್ರಿಯರ ಕವನಗಳು ಈ ವೇದಿಕೆಯಲ್ಲಿ ಪ್ರಕಟವಾಗಿವೆ. ನನಗೆ ಈ ವೇದಿಕೆ ನನ್ನ ಕನ್ನಡ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಿದೆ. ನಿಜಕ್ಕೂ ಈ ವೇದಿಕೆಯಲ್ಲಿ ನಾನು ಮಕ್ಕಳ ಸಾಹಿತ್ಯವೂ ಎಷ್ಟು ಅಧ್ಭುತವಾಗಿರುತ್ತೆ ಎಂಬುದನ್ನು ತಿಳಿದಿರುವೆ. ಇನ್ನು ನನ್ನ ಅನುಭವ ಮಕ್ಕಳ ಜಗಲಿಯಲ್ಲಿ ಸಾಹಿತ್ಯದ ಅದ್ಭುತ ಭೋಜನದಲ್ಲಿ ಉಪ್ಪಿನ ಕಾಯಿಯು ರುಚಿಯನ್ನು ಹೆಚ್ಚಿಸಿದಂತೆ. ನನ್ನ ಸಾಹಿತ್ಯ ಅಭಿರುಚಿಯನ್ನು ಈ ವೇದಿಕೆ ಹೆಚ್ಚಿಸಿದೆ. ಇನ್ನು ನಾನು ದ್ವಿತೀಯ ಪಿಯು ವರೆಗೂ ಮಕ್ಕಳ ಜಗಲಿಯಲ್ಲಿ ಬರಹವನ್ನು ಮುಂದುವರೆಸುತ್ತೇನೆ..
      ನನ್ನ ಮುಂದಿನ ಕನಸು ನಾನು ಕನ್ನಡ ಸಾಹಿತ್ಯದಲ್ಲಿ ಒಂದು ಸಾಧನೆ ಮಾಡಬೇಕೆಂದು ಆಶಿಸಿದ್ದೇನೆ. ಅದಕ್ಕೆ ಮಕ್ಕಳ ಜಗಲಿ ಒಂದು ಉತ್ತಮ ವೇದಿಕೆಯೆಂದು ನನಗನಿಸಿದೆ. ಈ ವೇದಿಕೆಯ ಸದುಪಯೋಗವನ್ನು ನಾನು ಪಡೆದುಕೊಳ್ಳುತ್ತೇನೆ. ಜೊತೆಗೆ ವಿದ್ಯಾಭ್ಯಾಸದಲ್ಲಿ ನಾನು ಜಿಲ್ಲಾಧಿಕಾರಿಯಾಗುವ ಕನಸು ಕಂಡಿದ್ದೇನೆ. ನಮ್ಮ ದೇಶ ಸೇವೆ ಮಾಡಬೇಕೆಂಬ ಮಹದಾಸೆಯನ್ನು ಹೊಂದಿದ್ದೇನೆ. ನಾನು ಒಬ್ಬ ಜಿಲ್ಲಾಧಿಕಾರಿಯಾಗಿ ಅತ್ಯುತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಮಾದರಿ ದೇಶ ಕಟ್ಟುವ ಆಸೆ ಹೊಂದಿದ್ದೇನೆ. ಇದಕ್ಕಾಗಿ ನಾನು ಬಹಳ ಶ್ರಮಪಟ್ಟು ಪ್ರಾಮಾಣಿಕವಾಗಿ ಓದುತ್ತೇನೆ. ಜಿಲ್ಲಾಧಿಕಾರಿಯಾದ ನಂತರ ಪ್ರಾಮಾಣಿಕವಾಗಿದ್ದು, ಪ್ರಜಾಪ್ರಭುತ್ವದ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಬೇಕೆಂಬ ಆಸೆಯನ್ನು ಹೊಂದಿದ್ದೇನೆ. ನನಗೆ ನನ್ನ ಶಿಕ್ಷಕರ ಪ್ರೋತ್ಸಾಹವೇ ಇದಕ್ಕೆಲ್ಲ ಕಾರಣ, ನಾನು ಇಂತಹ ಗುರುಗಳು ಹಾಗೂ ಶಾಲೆಯನ್ನು ಪಡೆಯುವುದಕ್ಕೆ ನಿಜಕ್ಕೂ ಪುಣ್ಯ ಮಾಡಿದ್ದೇನೆ. ನಮ್ಮ ಶಿಕ್ಷಕರು ನನಗೆ ಹೇಳಿಕೊಟ್ಟ ಸಮಾಜ ನಿರ್ಮಾಣವನ್ನು ನಾನು ಮಾಡುತ್ತೇನೆ. ನನ್ನೆಲ್ಲ ಶಿಕ್ಷಕರು ಹೇಳಿಕೊಟ್ಟ ಮೌಲ್ಯಗಳನ್ನು ಅಳವಡಿಸಿಕೊಂಡು ಅವರ ಆಸೆಯನ್ನು ಈಡೇರಿಸುತ್ತೇನೆ. ನನ್ನ ತಂದೆ ತಾಯಿಯ ತ್ಯಾಗ ಪ್ರೀತಿಗೆ ಸಣ್ಣ ಉಡುಗೊರೆ ಕೊಡುತ್ತೇನೆ. ಹೀಗೆಯೇ ಎಲ್ಲಾ ವಿದ್ಯಾರ್ಥಿಗಳು ಸಹ ಶಿಕ್ಷಕರ, ತಂದೆ ತಾಯಿಯರ ಆಸೆಯ ಜೊತೆಗೆ ದೇಶ ಸೇವೆ ಮಾಡಬೇಕು ಎಂಬ ಗುರಿ ತಂದುಕೊಳ್ಳುವುದು ಅವಶ್ಯವಾಗಿದೆ..... ಧನ್ಯವಾದಗಳು.
......................... ನಂದಿತಾ ಯು ತೋರಣಗಲ್
10ನೇ ತರಗತಿ
ಸರ್ಕಾರಿ ಪ್ರೌಢ ಶಾಲೆ ತೋರಣಗಲ್ಲು.
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
******************************************



     ಎಲ್ಲರಿಗೂ ನಮಸ್ಕಾರಗಳು. ನಾನು ಪ್ರಣಮ್ಯ.ಜಿ. 2022-23 ನೇ ಸಾಲಿನ ಪಬ್ಲಿಕ್ ಪರೀಕ್ಷೆಗಳನ್ನು ಬರೆದು ಪೂರ್ಣಗೊಳಿಸಿರುವ ನಾನು 578 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯನ್ನು ಗಳಿಸಿದ್ದೇನೆ. ಆದರೆ 600 ಕ್ಕಿಂತ ಅಧಿಕ ಅಂಕಗಳ ನಿರೀಕ್ಷೆಯಲ್ಲಿದ್ದ ನನಗೆ ನಿರಾಶೆಯಾಗಿರುವುದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದೇನೆ.
     ನನ್ನ ಮುಂದಿನ ಪದವಿ ಪೂರ್ವ ವಿದ್ಯಾಭ್ಯಾಸವನ್ನು SDM ಕಾಲೇಜು ಉಜಿರೆಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ದುಕೊಂಡು ಮುನ್ನೆಡೆಸುವ ಯೋಜನೆಯಲ್ಲಿ ನಾನಿದ್ದೇನೆ. ಈ ಸಂದರ್ಭದಲ್ಲಿ ನನ್ನ ವಿಧ್ಯಾಭ್ಯಾಸಕ್ಕೆ ಹಾಗೂ ನನ್ನ ಇತರ ಚಟುವಿಕೆಗಳಿಗಾಗಿ ಸಹಕರಿಸಿದ ನನ್ನ ಪೋಷಕರಿಗೆ ಮತ್ತು ನನ್ನ ಗುರುವೃಂದದವರೆಲ್ಲರಿಗೂ ಮನದಾಳದ ವಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ.
      ಮಕ್ಕಳ ಜಗಲಿಯೆಂಬ ಅದ್ಭುತವಾದ ವೇದಿಕೆ ನನಗೆ ನೀಡಿದ ಅವಕಾಶಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜಗಲಿಯಲ್ಲಿ ನಾನೂ ಒಬ್ಬಳು ಸದಸ್ಯೆ ಎಂಬುವುದೇ ನನಗೆ ಹೆಮ್ಮೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ ವಸತಿ ನಿಲಯದಲ್ಲಿ ನಿಲ್ಲುವ ಯೋಚನೆಯಿದೆ. ಇದರಿಂದ ಜಗಲಿಯ ಬಳಗಕ್ಕೆ ದೂರವಾಗಬಹುದೇನೋ ಎಂಬ ಬೇಸರವೂ ಕಾಡುತ್ತಿದೆ. ಸಮಯ ಸಿಕ್ಕಾಗಲೆಲ್ಲಾ ಜಗಲಿಯೊಂದಿಗೆ ನನ್ನ ಕಲಾ ಚಟುವಟಿಕೆಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ. ಮಕ್ಕಳ ಜಗಲಿ ವಿಭಾಗದಲ್ಲಿರುವ ಎಲ್ಲರಿಗೂ ನನ್ನ ಧನ್ಯವಾದಗಳು. ವಂದನೆಗಳೊಂದಿಗೆ...............
............................................... ಪ್ರಣಮ್ಯ ಜಿ. 
10ನೇ ತರಗತಿ 
ಸಂತ ಜಾರ್ಜ್ ಆಂಗ್ಲಮಾಧ್ಯಮ 
ಪ್ರೌಢಶಾಲೆ , ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
******************************************



      ಎಲ್ಲರಿಗೂ ನಮಸ್ಕಾರ ನನ್ನ ಹೆಸರು ಶಿಫಾನ. ಮಕ್ಕಳ ಜಗಲಿಯಲ್ಲಿ ನಾನು ಈಗಾಗಲೇ ಕವನ, ಕಥೆ, ಅಕ್ಕನಪತ್ರಕ್ಕೆ ಉತ್ತರ ಬರೆದು ನಿಮ್ಮೊಂದಿಗೆ ಬೆರೆತವಳು. ನನ್ನ ಈ ಅಮೂಲ್ಯವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 504 ಅಂಕ ಪಡೆದು ಈ ಮಕ್ಕಳ ಜಗಲಿಯ ಮೂಲಕ ಮುಂದಿನ ಕನಸಿನ ಬಗ್ಗೆ ಹೇಳಲು ಅವಕಾಶವನ್ನು ಕೊಟ್ಟ ಮಕ್ಕಳ ಜಗಲಿಗೆ ವಂದನೆಗಳು. ನಾನು ಭವಿಷ್ಯದಲ್ಲಿ ಉತ್ತಮ ಡಾಕ್ಟರ್ ಆಗಬೇಕೆಂಬ ಕನಸಿನ ಹಾದಿಯಲ್ಲಿದ್ದೇನೆ. ನನ್ನ ಮುಂದಿನ ಭವಿಷ್ಯಕ್ಕೆ ಸದಾ ನಿಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ.... ಧನ್ಯವಾದಗಳು.
....................................................... ಶಿಫಾನ
10ನೇ ತರಗತಿ 
ಸರಕಾರಿ ಫ್ರೌಢಶಾಲೆ ನಾರ್ಶ ಮೈದಾನ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
******************************************

Ads on article

Advertise in articles 1

advertising articles 2

Advertise under the article