-->
ಮಕ್ಕಳಿಗಾಗಿ ವಿಶೇಷ ಲೇಖನ: ಗಮನಕ್ಕೆ ಬರದಂತೆ ಜೀವ ಹರಣ ಮಾಡುವ ರಿಪ್ ಪ್ರವಾಹಗಳು.

ಮಕ್ಕಳಿಗಾಗಿ ವಿಶೇಷ ಲೇಖನ: ಗಮನಕ್ಕೆ ಬರದಂತೆ ಜೀವ ಹರಣ ಮಾಡುವ ರಿಪ್ ಪ್ರವಾಹಗಳು.

ಮಕ್ಕಳಿಗಾಗಿ ವಿಶೇಷ ಲೇಖನ
ಲೇಖನ: ಗಮನಕ್ಕೆ ಬರದಂತೆ ಜೀವ ಹರಣ ಮಾಡುವ ರಿಪ್ ಪ್ರವಾಹಗಳು
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಮೊನ್ನೆ ಒಂದು ಆಘಾತಕಾರಿ ಸುದ್ದಿ ಎಲ್ಲರೂ ಓದಿದ್ದೇವೆ. ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ಬಂದ ಮೂವರು ಮಕ್ಕಳು ಸಮುದ್ರದಲ್ಲಿ ತೇಲಿ ಹೋದರು. ಜನ ಮುಳುಗಿ ಮೃತಪಟ್ಟರು ಎಂದು ಭಾವಿಸಿದ್ದಾರೆ. ಆದರೆ ಅದು ಮುಳುಗಿ ಮೃತಪಟ್ಟದ್ದಲ್ಲ ತೇಲಿ ಹೋದದ್ದು. ಇಂತಹ ಪರಿಸ್ಥಿತಿ ಎದುರಾದಾಗ ನುರಿತ ಈಜುಗಾರರು ಕೂಡಾ ಗಲಿಬಿಲಿಗೊಳ್ಳುತ್ತಾರೆ. ಆ ಗಲಿಬಿಲಿಯಲ್ಲಿ ಏನು ಮಾಡಬೇಕೆಂದು ತಿಳಿಯದೇ ದಡದ ಕಡೆ ಈಜಿ ಸ್ನಾಯು ಸೋಲಿನಿಂದ ಮುಳುಗಿ ಮೃತಪಟ್ಟ ಉದಾಹರಣೆಗಳಿವೆ. ಬಹಳ ವರ್ಷಗಳ ಹಿಂದೆ ಕುಂದಾಪುರ ಸಮೀಪದ ಕೋಡಿ ಬೀಚ್ ನಲ್ಲಿ ನಮ್ಮ ಶಿಕ್ಷಕರೊಬ್ಬರ ಮಗ ಅವರ ಎದುರೇ ತೇಲಿ ಹೋದದ್ದು ನನಗೇ ಇನ್ನೂ ಮರೆಯುವುದು ಸಾಧ್ಯವಾಗಿಲ್ಲ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ2022 ರಲ್ಲಿ 77 ಜನ ಈ ಕಾರಣದಿಂದ ಸತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಹಾಗಾದರೆ ಈ ಮಕ್ಕಳ ಸಾವಿಗೆ ಕಾರಣವಾದ ಅಂಶದ ಬಗ್ಗೆ ಈ ಹಿಂದೆ ಕೂಡಾ ಬರೆದಿದ್ದೆ. ಇವತ್ತು ಮತ್ತೊಮ್ಮೆ ಬರೆಯುತ್ತಿದ್ದೇ‌ನೆ. ದಯವಿಟ್ಟು ಸಮುದ್ರ ದಂಡೆಗೆ ಭೇಟಿ ನೀಡುವ ಎಲ್ಲರಿಗೂ ಈ ಮಾಹಿತಿ ತಲುಪಿಸುತ್ತೀರಿ ಮತ್ತು ತಲುಪಿಸಬೇಕು ಎಂಬುದೇ ನನ್ನ ಪ್ರಾರ್ಥನೆ.

ಮಕ್ಕಳನ್ನು ಬಲಿ ತೆಗೆದುಕೊಂಡ ಈ ವಿದ್ಯಮಾನದ ಹೆಸರು "ರಿಪ್ ಪ್ರವಾಹಗಳು" (Rip currents). ನದಿಗಳಲ್ಲಿ ಇಲ್ಲಿ ಸುಳಿಗಳಿವೆ ಎಂದು ಎಚ್ಚರಿಕೆ ಫಲಕಗಳನ್ನು ಹಾಕಿದ ಹಾಗೆ ಸಮುದ್ರದಲ್ಲಿ ಇಲ್ಲಿ ರಿಪ್ ಪ್ರವಾಹಗಳಿವೆ ಎಂದು ಬೋರ್ಡ್ ಹಾಕಲು ಸಾಧ್ಯವಿಲ್ಲ. ಏಕೆಂದರೆ ರಿಪ್ ಪ್ರವಾಹಗಳು ನಿರೀಕ್ಷಿತವಲ್ಲ. ಇವು ಏಕಾಏಕಿ ರೂಪುಗೊಳ್ಳುತ್ತವೆ. ಆದ್ದರಿಂದ ಯಾವುದೇ ಮುನ್ನೆಚ್ಚರಿಕೆ ಸಾಧ್ಯವಿಲ್ಲ. ಹಾಗಾದರೆ ಈ ಮಾರಕ ಪ್ರವಾಹಗಳು ರೂಪುಗೊಳ್ಳುವುದಾದರೂ ಹೇಗೆ?

ನಾವೆಲ್ಲರೂ ಸಮುದ್ರ ದಂಡೆಗೆ ಹೋಗುವುದದರೂ ಏಕೆ? ಅಲೆಗಳ ಮೋಹಕತೆಗೆ ಮನಸೋತು ಅಲ್ಲವೇ? ಮತ್ತೆ ಮತ್ತೆ ಅಲೆಗಳು ದಡಕ್ಕೆ ಬಂದು ಬಡಿಯುತ್ತಲೇ ಇರುತ್ತವೆ. ಆ ದಡ ಸೋಲುವುದಿಲ್ಲ ಅಲೆಗಳು ದಣಿಯುವುದಿಲ್ಲ. ಆ ಏಕಾತಾನತೆಯಲ್ಲಿಯೇ ಅದು ನಿಮಗೆ ನಿತ್ಯ ಸ್ಪೂರ್ತಿಯ ಸೆಲೆ. ಅಲೆಗಳು ಬಂದು ದಡಕ್ಕೆ ಬಡಿಯುವಂತೆ ಮಾಡುವುದು ಗಾಳಿಯ ಶಕ್ತಿ. ಗಾಳಿ ಈ ನೀರನ್ನು ಮಡಚಿ ಅಲೆಗಳಂತೆ ಮಾಡಿ ದಡಕ್ಕೆ ತಂದು ಸುರಿಯುತ್ತದೆ. ದಡದಲ್ಲಿ ಉಂಟಾಗುವ ಈ ನೀರಿನ ಬೆಟ್ಟ ಒಮ್ಮೆಲೇ ಹಿಂದಕ್ಕೆ ಸರಿಯುವ ನೀರು ಅಡ್ಡ ಬರುವ ಸಣ್ಣ ಪುಟ್ಟ ವಸ್ತುಗಳನ್ನು ತನ್ನ ಜೊತೆಗೆ ಒಯ್ಯುತ್ತದೆ. ಈ ಹಿಂದಿರುಗವ ನೀರು ಯಾವಾಗಲೂ ಕಡಿಮೆ ಅಡೆತಡೆ ಇರುವ ಜಾಗವನ್ನು ಹುಡುಕುತ್ತವೆ. ಎಲ್ಲಾ ಜಾಗ ಒಂದೇ ಇದ್ದರೆ ಎಲ್ಲಾ ಕಡೆಯಲ್ಲೂ ಒಂದೇ ರೀತಿ ಹರಡುತ್ತದೆ.
ಚಿತ್ರವನ್ನು ನೋಡಿ ದಡದ ಮೇಲೆ ಮರಳು ದಿಬ್ಬಗಳಿರುವ ಹಾಗೆ ಸಮುದ್ರದ ಒಳಗೂ ಇರುತ್ತವೆ. ಈ ದಿಬ್ಬಗಳು ಅಖಂಡವಾಗಿರದೇ ಮಧ್ಯದಲ್ಲಿ ಖಾಲಿ ಜಾಗ ಇರಬಹುದು ಮತ್ತು ಈ ಖಾಲಿ ಜಾಗ ಬದಲಾಗುತ್ತದೆ ಕೂಡಾ. ಈ ಖಾಲಿ ಜಾಗದಲ್ಲಿ ಸಮುದ್ರ ಆಳವಾಗಿರುವುದರಿಂದ ನೀರಿನ ಬೆಟ್ಟ ಆ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಆದ್ದರಿಂದ ಆ ಕಂಡಿಯ ಆಚೆ ಈಚೆ ಇರುವ ನೀರು ಪ್ರವಾಹದ ರೂಪದಲ್ಲಿ ದಂಡೆ ಸಮಾಂತರವಾಗಿ ವಿರುಧ್ಧ ನೇರದಲ್ಲಿ ಕಂಡಿ ಇರುವ ಕಡೆಗೆ ನುಗ್ಗುತ್ತವೆ. ಕಂಡಿ ಇರುವ ಕಡೆ ಪರಸ್ಪರ ಢಿಕ್ಕಿಯಾಗುವ ಈ ಪ್ರವಾಹಗಳು ಸಮುದ್ರದ ಒಳಗೆ ನುಗ್ಗುತ್ತವೆ. ಈ ಅಭಿಮುಖ ಪ್ರವಾಹಗಳು ಪೂರಕ ಪ್ರವಾಹಗಳು (feeder currents). ಪೂರಕ ಪ್ರವಾಹಗಳು ಒಂದಾಗಿ ರಭಸವಾಗಿ ಸಮುದ್ರದ ಒಳಗೆ ನುಗ್ಗುವ ಭಾಗವೇ ಪ್ರವಾಹದ ಕತ್ತು (neck). ಇದಕ್ಕೆ ಎದುರಾಗಿ ಈಜಿ ಎಂತಹ ಅನುಭವಿ ಈಜುಗಾರನೂ ಕೂಡಾ ದಡ ಸೇರಿದ ಉದಾಹರಣೆಗಳಿಲ್ಲ. ನಂತರ ಈ ಪ್ರವಾಹ ಚದುರುತ್ತದೆ. ಅದೇ ತಲೆ (head). ತಲೆಯ ಭಾಗದಲ್ಲಿ ಅದು ಹೊರಕ್ಕೆ ಮತ್ತು ದುರ್ಬಲವಾಗುವುದರಿಂದ ಅಲ್ಲಿಂದ ಹೊರಗೆ ಈಜಿ ದಡದ ಕಡೆಗೆ ಈಜಬೇಕು. ಆದರೆ ಈಜೇ ಬಾರದ ಪುಟ್ಟ ಮಕ್ಕಳು ಅನನುಭವಿಗಳು ಬಲು ಬೇಗನೇ ಮುಳುಗಿ ಸಾಯುತ್ತಾರೆ. ಹಾಗಾದರೆ ಈ ಪ್ರವಾಹವನ್ನು ಮುಂಚಿತವಾಗಿ ಗುರುತಿಸುವುದು ಸಾಧ್ಯವಿಲ್ಲವೇ? ಸಾಧ್ಯ. ಆದರೆ ಹೇಗೆ?

ಸಮುದ್ರದ ನೀರು ಸಮುದ್ರದ ಒಳಗೆ ಹೋಗುವ ಬದಲಾಗಿ ಅಡ್ಡಕ್ಕೆ ಚಲಿಸುತ್ತಿದ್ದರೆ ಅದು ನಿಸ್ಸಂಶಯವಾಗಿ ರಿಪ್ ಪ್ರವಾಹ. ಕಸ, ಸಮುದ್ರ ಕಳೆಗಳು ದಡಕ್ಕೆ ಸಮಾಂತರವಾಗಿ ಸಾಗುತ್ತಿದ್ದರೆ ಅದು ರಿಪ್ ಪ್ರವಾಹ. ನೀರು ಚಲನೆಯಲ್ಲಿದ್ದು ಕೆಸರಿನಿಂದ ಕೂಡಿದ್ದರೆ ಅಥವಾ ಕದಡಿದ್ದರೆ ಅದು ರಿಪ್ ಪ್ರವಾಹ. ಸರಿ. ರಿಪ್ ಪ್ರವಾಹದಿಂದ ರಕ್ಷಿಸಿಕೊಳ್ಳುವುದು ಹೇಗೆ?

1. ಯಾವುದೇ ಕಾರಣಕ್ಕೂ ಮಣಕಾಲು ಮಟ್ಟದ ನೀರಿಗಿಂತ ಹೆಚ್ಚಿನ ಆಳಕ್ಕೆ ಮಕ್ಕಳನ್ನು ಹೋಗಲು ಬಿಡಬೇಡಿ.
2. ಜೀವ ರಕ್ಷಕರಿಲ್ಲದ (life guards) ಸಮುದ್ರ ದಂಡೆಗಳಲ್ಲಿ ನೀರಿಗೆ ಇಳಿಯಬೇಡಿ.
3. ಕೆಲವು ಕಡೆ ಹಳದಿ ಮತ್ತು ಕೆಂಪು ಪತಾಕೆಗಳನ್ನು ಹಾಕಿರುತ್ತಾರೆ ಅಂತಹ ಜಾಗಗಳು ಸುರಕ್ಷಿತ ಮತ್ತು ಅಲ್ಲಿ ತೇಲಿ ಹೋಗುವವರನ್ನು ಗುರುತಿಸುವುದು ಸುಲಭ.
4. ನೀವು ರಿಪ್ ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದೀರಿ ಎಂದು ತಿಳಿದ ಕೂಡಲೆ ಪ್ರವಾಹಕ್ಕೆ ಲಂಬವಾಗಿ ಅಂದರೆ ದಂಡೆಗೆ ಸಮಾಂತರವಾಗಿ ಈಜಿ. ಪ್ರವಾಹದಿಂದ ಹೊರ ಬಂದಿದ್ದೀರಿ ಎಂದು ಅರಿವಾದಾಗ ದಂಡೆಯ ಕಡೆಗೆ ಈಜಿ. ಮೊದಲು ಯಾವುದೇ ಕಾರಣಕ್ಕೆ ದಡದ ಕಡೆಗೆ ಈಜಬೇಡಿ. 
      ನ್ಯೂಜಿಲೆಂಡ್ ನ ಮುರಿವಾಲ್ ಬೀಚ್ ನಲ್ಲಿ ರಿಪ್ ಪ್ರವಾಹದಿಂದ ತಪ್ಪಿಸಿಕೊಳ್ಳುವ ಒಂದು ಪದವಿ ಇದೆ ಎಂದು ನಿಮಗೆ ಗೊತ್ತೇ? ಅಲ್ಲಿನ ತಜ್ಞರ ಪ್ರಕಾರ ನುರಿತ ಈಜುಗಾರ ಕೂಡಾ ಸರಿಯಾಗಿ ಈಜಿದರೆ 300 ಮೀಟರ್‌ನಷ್ಟು ಕಡಲೊಳಗೆ ಒಯ್ಯಲ್ಪಡುತ್ತಾನೆ ಮತ್ತು ದಡವನ್ನು ತಲುಪಲು ಮತ್ತೆ 400 ಮೀಟರ್ ಈಜಬೇಕಾಗುತ್ತದೆ ಎನ್ನುತ್ತಾರೆ. ಅಂದರೆ ನೀವು ಧೈರ್ಯ ಕಳೆದುಕೊಂಡಿರೋ ನೀವು ಸತ್ತ ಹಾಗೆ.
5. ಸಮುದ್ರ ದಂಡೆಗೆ ಪ್ರವಾಸ ಹೋಗುವುದಾದರೆ ಮಕ್ಕಳಿಗೆ ಈ ಬಗ್ಗೆ ವಿವರವಾದ ಮಾಹಿತಿ ನೀಡಿ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 



Ads on article

Advertise in articles 1

advertising articles 2

Advertise under the article